ನಗರದ ಜೆ.ಎಸ್.ಎಸ್.ಸಭಾಂಗಣದಲ್ಲಿ ಉದಯವಾಹಿನಿಯಲ್ಲಿ ಪ್ರತಿ ದಿನ ಸಂಜೆ ೬-೩೦ ರಿಂದ ೭ ರವರೆಗೆ ಪ್ರಸಾರವಾಗುತ್ತಿರುವ ದೈನಿಕ ಧಾರಾವಾಹಿ “ಪುಣ್ಯಕೋಟಿ”ಯ ಸಾವಿರದ ಸಂಭ್ರಮ ತಾರೀಕು ೦೪/೦೪/೨೦೧೦ ಭಾನುವಾರ ನೆರವೇರಿತು.
ಬೆಳಗುವ ಸೂರ್ಯನ ಆಕಾರದಲ್ಲಿದ್ದ ಸೆಟ್ ನೆರೆದಿದ್ದವರ ಕಣ್ಣನ್ನ ತನ್ನೆಡೆಗೆ ಸೆಳೆದುಕೊಂಡಿತ್ತು.ಆ ಸೆಟ್ಟಿನ ನಡುವೆ ಸರಿಯಾಗಿ ಹನ್ನೊಂದು ಗಂಟೆಗೆ ಕಾರ್ಯಕ್ರಮದ ಪ್ರಾರಂಭ.
ಮೊದಲು ಧಾರಾವಾಹಿಯ ಪಾತ್ರಗಳಲ್ಲಿ ಒಬ್ಬರಾಗಿದ್ದ ಅನಿಲ್ ಕಾಮತ್,ಧಾರಾವಾಹಿಗೆ ತನ್ನ ಹಾಡನ್ನ ನೀಡಿದ್ದ ರಾಜು ಅನ೦ತಸ್ವಾಮಿ,ಹಾಗು ಸುರೇಂದ್ರನಾಥ್ ಬೇಗುರ್,ಮೈನ ಚಂದ್ರು,ಡಾ.ವಿಷ್ಣುವರ್ಧನ್,ಕೆ.ಎಸ್.ಅಶ್ವಥ್,ಸಿ.ಅಶ್ವಥ್ ಅವರಿಗೆ ಸಂತಾಪ ಸೂಚನೆಯಾಗಿ ಒಂದು ನಿಮಿಷದ ಮೌನವನ್ನ ಆಚರಿಸಲಾಯಿತು.
ಆ ನಂತರ ವೀಣಾ ವೆಂಕಟೇಶ್ ಅವರ ಮೋಹಕ ಕಂಠದಿಂದ ಪ್ರಾರ್ಥನೆ.ಅದು ಕೇಳುಗರನ್ನ ಸಂಮೋಹನಗೊಳಿಸಿದ್ದು ಸುಳ್ಳಲ್ಲ.
ನಂತರದ ಸಭಾಕಾರ್ಯಕ್ರಮದಲ್ಲಿ ವೇದಿಕೆಯನ್ನ ಅಲಂಕರಿಸಿದವರು ಮಾಸ್ಟರ್ ಹಿರಣ್ಣಯ್ಯ,ಕನ್ನಡದ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ರವರ ಧರ್ಮಪತ್ನಿ ಭಾಗ್ಯವತಿ ನಾರಾಯಣ್,ಉದಯವಾಹಿನಿಯ ಮುಖ್ಯಸ್ಥರಾದ ವಿಜಯ ಕುಮಾರ್ ಮತ್ತು ನಟ ನವೀನ್ ಕೃಷ್ಣ.
ಭಾಗ್ಯವತಿ ನಾರಾಯಣ್ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಎಲ್ಲಾರಿಗೂ ಶುಭವಾಗಲಿ ಎಂದು ಹಾರೈಸಿದರೆ,ನವೀನ್ ಕೃಷ್ಣ “ಪುಸ್ತಕ ತಾಂಬೂಲ”ವನ್ನ ಬಿಡುಗಡೆ ಮಾಡಿದರು.
ಪುಸ್ತಕ ತಾಂಬೂಲ
ಇದು ಪುಣ್ಯಕೋಟಿ ಬಳಗ ಕೊಟ್ಟ ನೂತನ ತಾಂಬೂಲ.ಊಟ ಮುಗಿಸಿ ಹೊರಡುವಾಗ ಎಲ್ಲರೂ ತೆಂಗಿಲ ತಾಂಬೂಲ ಕೊಡುತ್ತಾರೆ,ಆದರೆ ಇಲ್ಲಿ ತೆಂಗಿನ ಕಾಯಿಯ ಬದಲಿಗೆ ಭಗವದ್ಗೀತೆಯ ಪುಸ್ತಕ.ಅದರ ಮೇಲೆ “ಗೋವಿನ ಗೀತೆ ನೆನಪಾದಾಗ ಪುಣ್ಯಕೋಟಿ,ಪಠಿಸಿದರೆ ಗೋವರ್ಧನನ ಗೀತೆ ಧನ್ಯ ಕೋಟಿ”ಎಂಬ ಸಾಲು.ಇಲ್ಲಿ ಪುಸ್ತಕವೇ ತಾಂಬೂಲ.
ಉದಯ ವಾಹಿನಿಯ ಮುಖ್ಯಸ್ಥರಾದ ವಿಜಯಕುಮಾರ್ ಕೊಡುವ ನೆನಪಿನ ಕಾಣಿಕೆಯ ಬಿಡುಗಡೆ ಮಾಡಿದರು.
ಇವರೆಲ್ಲರನ್ನ ವೇದಿಕೆಗೆ ಬರಮಾಡಿಕೊಂಡಿದ್ದು ಪ್ರಧಾನ ನಿರ್ದೇಶಕರಾದ ಏ.ಜಿ.ಶೇಷಾದ್ರಿ ಮತ್ತು ನಿರ್ಮಾಪಕರಾದ ಮಣಿಕಂಠ ಸೂರ್ಯ.
ಮಾಸ್ಟರ್ ಹಿರಣ್ಣಯ್ಯನವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮ ಸಂಜೆ ಏಳರ ತನಕ ಕಣ್ಮನ ತಣಿಯುವಂತೆ ನೆರವೇರಿತು.